ಹುಬ್ಬಳ್ಳಿಯಲ್ಲಿ ಜ್ಞಾನವಿಕಾಸ ಮಹಿಳಾ ತರಬೇತಿ ಸಮಾರೋಪ: ಆರ್ಥಿಕ ಸಬಲತೆಗೆ ಕೌಶಲ್ಯವೇ ದಾರಿ

ಹುಬ್ಬಳ್ಳಿ: ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಸೃಜನಶೀಲ ಕಾರ್ಯಕ್ರಮವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಹುಬ್ಬಳ್ಳಿ ಇವರ ವತಿಯಿಂದ 20 ದಿನಗಳ ‘ಕರ್ನಾಟಕ ಕಸೂತಿ ಮತ್ತು ಮೆಹಂದಿ ತರಬೇತಿ’ಯನ್ನು ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ನಡೆಸಲಾಯಿತು.
ತರಬೇತಿಯ ಸಮಾರೋಪ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಪೂಜ್ಯರ ಮಾರ್ಗದರ್ಶನದ ಮೇರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮದ ಸಮಸ್ಯೆಗಳನ್ನು ಗುರುತಿಸಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಮಹಿಳೆಯರ ಮೂಲಕ ಕುಟುಂಬದ ಅಭಿವೃದ್ಧಿ ಕಾಣಬಹುದು ಎಂಬ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮವನ್ನು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಅನುಷ್ಠಾನಕ್ಕೆ ತಂದರು. ತೊಟ್ಟಿಲನ್ನು ತೂಗುವ ಕೈ ಇಡೀ ದೇಶವನ್ನೇ ಆಳಬಲ್ಲದು ಎಂದು ಹೇಳುತ್ತಾ ಕಲಿತ ಕಲೆಯಲ್ಲಿ ನಿರಂತರವಾಗಿ ತೊಡಗಿಸಿ ಕೊಂಡಾಗ ಆರ್ಥಿಕ ಸಬಲತೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಊರಿನ ಗಣ್ಯರಾದ ಶ್ರೀಯುತ ರಾಮಚಂದ್ರ ಹದಗಲರವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪೂಜ್ಯರು ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಿದರು. ಗ್ರಾಮವೃದ್ಧಿಯ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ಶಿಕ್ಷಕರಾದ ಶ್ರೀಮತಿ ಸುಶೀಲಾ ಮತ್ತು ಕುಮಾರಿ ಚೇತನರವರನ್ನು ಗೌರವಿಸಲಾಯಿತು. ಧಾರವಾಡ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಹನುಮಂತ ನಾಯಕ್ ರವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತರಬೇತಿಯನ್ನು ಪಡೆದಂತ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ನಿರ್ದೇಶಕರು ಅಭಿನಂದನಾ ಪತ್ರವನ್ನು ವಿತರಿಸಿದರು..
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕಿ ಶ್ರೀಮತಿ ನೇತ್ರಾವತಿ ನಿರೂಪಿಸಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ರೇಣುಕಾ ಸ್ವಾಗತಿಸಿ ವಂದಿಸಿದರು.
ವರದಿಗಾರರು: ರಾಮಚಂದ್ರಪ್ಪ ಪೂಜೇರ
